ಲೇಖಕರು: ವಿ. ಕೃ. ಗೋಕಾಕ್ ಬೆಲೆ: 100/- ಪುಟಗಳು: 132 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ...................... ಪ್ರವಾಸ ಸಾಹಿತ್ಯವು ಕಾವ್ಯವಾದಾಗ ಅದರಲ್ಲಿ ಆವೇಶ ತುಂಬಿ, ಭಾವ ಇಲ್ಲವೆ ದರ್ಶನದ ಪ್ರಾಧಾನ್ಯ ಅಲ್ಲಿ ಸಂಭವಿಸುವುದುಂಟು. ಪ್ರವಾಸ ಸಾಹಿತ್ಯವು ಗದ್ಯವಾದಾಗ ವ್ಯಕ್ತಿಗಳ ಸ್ನೇಹವರ್ತುಲ, ಕಂಡ ದೇಶದ ಸಾಮಾಜಿಕ ಹಾಗೂ ನೈತಿಕ ಪರಿಸ್ಥಿತಿ, ವ್ಯಕ್ತಿ-ವ್ಯಕ್ತಿಗಳ ಸಂದರ್ಶನದಲ್ಲಾದ ಚಮತ್ಕಾರ ಇಲ್ಲವೆ ಮೋಜಿನ ಪ್ರಸಂಗಗಳು - ಇವೆಲ್ಲದರ ಕಡೆಗೆ ನನ್ನ ಲಕ್ಷ್ಯ ಹರಿದುಹೋಗುತ್ತದೆ. ನನ್ನೊಳಗಿನ ಬುದ್ಧಿಜೀವಿ ಅಲ್ಲಿ ಬಂದು ತನ್ನ ದರ್ಶನಗಳನ್ನು ನೆನಸಿಕೊಂಡು ಆ ಆರ್ಥೀಕರಣದ ವಿಧಾನವನ್ನು ಈ ಉಳಿದ ಪ್ರಸಂಗಗಳಿಗೆ ಅನ್ವಯಿಸುತ್ತಾನೆ. ಪ್ರವಾಸ ಸಾಹಿತ್ಯದ ಮೇಲ್ಮೈ ಇರುವುದೆಲ್ಲಿ? ಗದ್ಯವೇ ಆಗಲಿ, ಪದ್ಯವೇ ಆಗಲಿ, ಅದು ನಾವು ಕಂಡ ದೇಶದ ಹಾಗೂ ಜನತೆಯ ಹೃದಯವನ್ನು ಬಿಚ್ಚಿ ತೋರಿಸಬೇಕು. ಇದ್ದಂತೆ ಅದನ್ನು ಜನರೆದುರಿಗೆ ತೆರೆದಿಡಬೇಕು. ಹೃದಯಕ್ಕೆ ಹೃದಯದ ಸಾಂಗತ್ಯವಿರದೆ ಪ್ರವಾಸ ಸಾಹಿತ್ಯವೆಲ್ಲಿಂದ ಬಂದೀತು? ಬರಿ ಜನತೆ ಅಲ್ಲ, ಅಲ್ಲಿಯ ನಿಸರ್ಗದ ರಮಣೀಯ ದೃಶ್ಯಗಳು, ಅಲ್ಲಿಯ ಸಾಮಾಜಿಕ ಪ್ರಗತಿಯನ್ನು ಅಳೆದು ತೋರಿಸುವ ಸಂಸ್ಥೆಗಳು, ಪರಂಪರೆಯನ್ನು ರಕ್ಷಿಸಿಕೊಂಡು ಬಂದ ಅಲ್ಲಿಯ ದೇವಾಲಯಗಳು ಇಲ್ಲವೆ ಭವ್ಯ ಮಂದಿರಗಳು; ಇವೆಲ್ಲ ಓದುಗನ ಮನಸ್ಸಿನಲ್ಲಿ ಅಳಿಸಲಾಗದ ಚಿತ್ರದಂತೆ ಮೂಡಿರಬೇಕು. ಹೀಗಾದಾಗ ಪ್ರವಾಸ ಕೃತಿಗಳೂ ಸಾಹಿತ್ಯವಾಗುತ್ತವೆ. ಲೇಖಕನ ಅಂತಃಕರಣ ಈ ಎಲ್ಲ ದೃಶ್ಯಗಳ ಮಧ್ಯೆ ಹೊಳೆ ಹರಿದಂತೆ ಹೊರಹೊಮ್ಮಬೇಕು. ಇಲ್ಲಿ ‘ಸಮುದ್ರದಾಚೆಯಿಂದ’ ಎಂಬ ಕೃತಿ ಉತ್ತಮವಾದದ್ದು. ಅದು ದಿನಚರಿಯ ರೂಪದಲ್ಲಿ ಬರುವುದರಿಂದ ಒಂದು ಮೈಲುಗಲ್ಲಿನಿಂದ ಇನ್ನೊಂದು ಮೈಲುಗಲ್ಲಿಗೆ ದಿನಾಲು ಹರಿಯುವ ಹೊಳೆಯಾಗುತ್ತದೆ. ಅದರ ವಿಷಯಗಳೋ ಅನಂತವಾಗಿರುತ್ತವೆ. ಅವು ಲೇಖಕನ ಚಲನವಲನ, ಆಸಕ್ತಿ, ಹಾಗೂ ಸ್ವಂತದ ಆದರ್ಶಗಳನ್ನು ಅವಲಂಬಿಸಿರುತ್ತವೆ.
-ವಿ. ಕೃ. ಗೋಕಾಕ್