ಲೇಖಕರು: ಹುಣಸೂರು ಮಾದುಪ್ರಸಾದ್ ಬೆಲೆ: 70 ಪುಟ: 80 ರಿಯಾಯಿತಿ: 10% ಪ್ರಕಾಶನ: ಅಭಿನವ, ಬೆಂಗಳೂರು ,............ ಕನ್ನಡ ಮಕ್ಕಳ ಸಾಹಿತ್ಯ ಲೋಕ ಜನಪದ, ಪಂಚತಂತ್ರ, ರಾಮಾಯಣ, ಮಹಾಭಾರತದಿಂದ ಬಿಡಿಸಿಕೊಂಡು ತನ್ನದೇ ಆದ ಹೊರಳುದಾರಿಯಲ್ಲಿರುವ ಈ ಸಂದರ್ಭದಲ್ಲಿ ಅನೇಕ ಗಮನಾರ್ಹ ಕೃತಿಗಳು ಬರುತ್ತಿವೆ. ಅವುಗಳಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆದ ಪುಸ್ತಕ "ತೊಟ್ಟಿಲಗೊಂಬೆ". ಕೇತು ಎಂಬ ತಳಸಮುದಾಯದ ಹುಡುಗ ಹುಟ್ಟಿದಾಗ ಅಮವಾಸ್ಯೆ ಹಾಗೂ ತಾಯಿತೀರಿದ ಕಾರಣವಾಗಿ ತನ್ನ ಸಮುದಾಯದಲ್ಲೂ ಅಸ್ಪ್ರಶ್ಯನಾಗಿ, ಸಮಾಜದ ಅವಹೇಳನ ಅನುಭವಿಸುತ್ತ ಬೆಳೆಯುತ್ತಾನೆ. ಎಲ್ಲರೂ ದೂರವಿಟ್ಟರೂ ಅವನ ಕ್ಲಾಸಿನ ಒಬ್ಬ ಹುಡುಗಿ ಅವನ ಬೆಂಬಲಕ್ಕೆ ನಿಲ್ಲುತ್ತಾಳೆ. ಅವಳ ಅಣತಿಯಂತೆ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯ ಹೀರೋ ಆಗುತ್ತಾನೆ. ಕೊನೆಗೆ ತಾಯಿಯನ್ನು ತಿಂದು ಹುಟ್ಟಿದವನು ಎಂಬ ಕಾರಣಕ್ಕಾಗಿ ತನ್ನನ್ನು ತೊರೆದು ಪರ ಊರಿನಲ್ಲಿ ಎರಡನೆಯ ಹೆಂಡತಿಯೊಂದಿಗೆ ವಾಸವಾಗಿದ್ದ ತಂದೆಮನೆಯನ್ನು ಹುಡುಕಿ ಸಹೋದರಿ ಪ್ರೀತಿಯನ್ನೂ ಪಡೆಯುತ್ತಾನೆ. ಕಾದಂಬರಿಯಲ್ಲಿ ವಯಸ್ಸಾದ ಸಂದರ್ಭದಲ್ಲಿ ಮೊಮ್ಮಗನನ್ನು ಸಾಕಬೇಕಾದ ಸಂಕಷ್ಠಕ್ಕೆ ಸಿಲುಕಿದ ಅಜ್ಜಿ, ಕೇತುವನ್ನು ಎಳ್ಳಷ್ಟೂ ಅಸ್ಪೃಶ್ಯತೆಯಿಂದ ಕಾಣದ ಪೇಟೆಯ ಹುಡುಗಿ, ಸಾಹಸಿ ಅಜ್ಜ ಮುಂತಾದ ಪಾತ್ರಗಳು ಮನೋಜ್ಞವಾಗಿವೆ. ಅನೇಕ ಅನಿರೀಕ್ಷಿತ ತಿರುವುಗಳಿಂದ ಕಾದಂಬರಿ ಕುತೂಹಲಕಾರಿಯಾಗಿದೆ. ಆರಂಭದಲ್ಲಿ ವಾಸ್ತವದಂತೆ ಸಾಗುವ ಕತೆ ಕೊನೆ ಕೊನೆಗೆ ಫ್ಯಾಂಟಸಿಯತ್ತ ಹೊರಳಿಕೊಳ್ಳುತ್ತದೆ. ಇದು ಕೆಲವರಿಗೆ ಇಷ್ಚವೂ ಆದರೆ, ಕೆಲವರಿಗೆ ಬೇಸರವೂ ತರಿಸಬಹುದು. ಕತೆ ಆರಂಭದಿಂದ ಕೊನೆಯವರೆಗೆ ಎಲ್ಲೆಲ್ಲೋ ಸಾಗಿ ಒಂದು ಮಾಲೆಯ ಬಂಧ, ಚೆಂದ ಕೊಡುವುದರಲ್ಲಿ ಸಫಲವಾಗುತ್ತದೆ. ಅದೇನೇ ಇದ್ದರೂ ಇದು ಹನ್ನೆರಡರಿಂದ ಹದಿನೆಂಟು ವರ್ಷದ ಮಕ್ಕಳಿಗೆ ಒಂದು ಉತ್ತಮ ಓದು ಕೊಡುತ್ತದೆಂಬುದರಲ್ಲಿ ಎರಡು ಮಾತಿಲ್ಲ.
ಗಣೇಶ ನಾಡೋರ ಮಕ್ಕಳ ಸಾಹಿತಿ